ಇದೇ ತಿಂಗಳ 14ರಂದು ತೆರೆಗೆಹಿರಿಯ ಪೋಷಕ ನಟ ಸುಂದರ್ ರಾಜ್ ಅಭಿನಯದ 250ನೇ ಚಿತ್ರ ಚಾರ್ಜ್ ಶೀಟ್ ಇದೇ ತಿಂಗಳ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ವಿಭಿನ್ನ ಕ್ರೈಂ, ಥ್ರಿಲ್ಲರ್ ಜತೆಗೆ, ತಂದೆ ಮಗಳ ನಡುವಿನ ಬಾಂಧವ್ಯದ ಸುತ್ತ ನಡೆಯುವ ಕಥಾಹಂದರವೂ ಈ ಚಿತ್ರದಲ್ಲಿದೆ.

2003 ರಿಂದ 2008ರ ಸಮಯದಲ್ಲಿ ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನಿರ್ವಹಿಸಿದ ವಿಶೇಷ ಪ್ರಕರಣಗಳೇ ಚಿತ್ರದ ಕಥೆಗೆ ಪ್ರೇರಣೆ.
ಈ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಹಾಡಿರುವ ‘ಋತುಮಾನವು’ ಹಾಡಲ್ಲಿ ತಂದೆ ಮಗಳ ನಡುವಿನ ಭಾವನಾತ್ಮಕ ಪ್ರೀತಿಯನ್ನು ಹೇಳಲಾಗಿದ್ದು, ಆ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಣ್ ಮತ್ತು ದಿನೇಶ್ ಜತೆಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಅಪರಾಧವನ್ನು ತನಿಖೆ ಮಾಡುವ ಕಥೆಗಳು ಹಲವಿದ್ದರೂ, ಸಮಾಜದ ಹೃದಯವನ್ನು ಸ್ಪರ್ಶಿಸುವ ಕಥೆಗಳು ವಿರಳ. ಅಂತಹ ಅಪರೂಪದ ಪ್ರಯತ್ನವೇ ಚಾರ್ಜ್ಶೀಟ್ 03-08.
ಹಿರಿಯ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಅವರ ಮೂಲ ಕಥೆಯನ್ನಾಧರಿಸಿ ವೆಂಕಟ್ ಭಾರದ್ವಾಜ್ ಈ ಚಿತ್ರದ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸಮೀರ್ ಕುಲಕರ್ಣಿ ಅವರ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಹಾಗೂ ಶಮೀಕ್ ವಿ. ಭಾರದ್ವಾಜ್ ಅವರ ಸಂಕಲನವಿದೆ. ಚಿತ್ರದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಸತ್ಯಶ್ರೀ, ಅಮರ್, ರೂಪೇಶ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.



