Kannada Beatz
News

ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ‌ “ದೈಜಿ” ಚಿತ್ರದ ಟೀಸರ್ ಬಿಡುಗಡೆ .

ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ಹಾರಾರ್ ಜಾನರ್ ಈ ಚಿತ್ರ .

ತಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ “ದೈಜಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ “ದೈಜಿ” ಚಿತ್ರತಂಡ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ “ದೈಜಿ” ಚಿತ್ರತಂಡದವರು ಮಾಧ್ಯಮದವರ ಜೊತೆಗೆ ಮಾತನಾಡಿದರು.

ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ರವಿ ಕಶ್ಯಪ್, ಹತ್ತು ವರ್ಷಗಳ ಹಿಂದೆ ನಾನು‌, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿತ ಚಿತ್ರ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತಂದಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಇನ್ನೂ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ “ದೈಜಿ” ಚಿತ್ರವನ್ನು ಕೆಲವೆ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ ಎಂದರು.

ಸಂಖ್ಯಾಶಾಸ್ತ್ರದ ಪ್ರಕಾರ ಮೂರು ಅಂಕಿಗೂ, ನನಗೂ ಹಾಗೂ ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ,‌ ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ ಮೂರನೇ ಸಿನಿಮಾ. ನನ್ನ ಹಾಗೂ ನಿರ್ಮಾಪಕರ ಮೂರನೇ ಕಾಂಬಿನೇಶನ್ ನ ಚಿತ್ರವೂ ಹೌದು.(ಒಂದು ಕಿರುಚಿತ್ರ). ಹೇಗೆ ಮೂರರ ನಂಟನ್ನು ಸಾಕಷ್ಟು ಉದಾಹರಿಸ ಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಈ ಕಥೆಯೇ “ದೈಜಿ” ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೆ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. “ದೈಜಿ” ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ “ದೈಜಿ” ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.

ಹುಟ್ಟು – ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೊಗುತ್ತದೆ. ಇದೇ ನಾವು ಸಾಮಾನ್ಯ ಹಾರಾರ್ ಚಿತ್ರಗಳಲ್ಲಿ ಕಾಣುವುದು. ಆದರೆ ನಿರ್ದೇಶಕ ಆಕಾಶ್ ಶ್ರೀವತ್ಸ ಈ ರೀತಿಯ ಹಾರಾರ್ ಸಿನಿಮಾ ಮಾಡಿಲ್ಲ. ಈವರೆಗೂ ನಾನು ಸಾಕಷ್ಟು ಹಾರಾರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿ ಕಥೆ ನಾನು ನೋಡಿಲ್ಲ. ಅಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ವತ್ಸ ಅವರು. ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ದ ಕಲಾವಿದರೊಂದಿಗೂ ನಟಿಸಿದ್ದೇನೆ. ಆದಷ್ಟು ಬೇಗ “ದೈಜಿ” ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರ‌ನಾಗಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು.

ಭೂಮಿ ಪಾತ್ರದಲ್ಲಿ ನಟಿಸಿರುವುದಾಗಿ ನಟಿ ರಾಧಿಕಾ ನಾರಾಯಣ್ ಹಾಗೂ ಗಗನ್ ಪಾತ್ರದಲ್ಲಿ ಅಭಿನಯಿಸಿರುವಿದಾಗಿ ದಿಗಂತ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಬಿ.ಎಂ.ಗಿರಿರಾಜ್, ಬರಹಗಾರ ಅಭಿಜಿತ್ ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಸುನಯನ ಸುರೇಶ್ ಮುಂತಾದರ “ದೈಜಿ” ಬಗ್ಗೆ ಮಾತನಾಡಿದರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಕಲನವಿರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ .

Related posts

ಬಿಜಾಪುರ(ವಿಜಯಪುರ)ದಲ್ಲಿ “ಉಡಾಳ”ನಿಗೆ ಮೊದಲ ಹಂತದ ಚಿತ್ರೀಕರಣ ಪೂರ್ಣ .

Kannada Beatz

ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು “ಯಾರಿಗೆ ಬೇಕು ಈ ಲೋಕ” ಚಿತ್ರದ ಫಸ್ಟ್ ಲುಕ್.

administrator

ಲಿಖಿತ್ ಶೆಟ್ಟಿ ಅಭಿನಯದ “ಫುಲ್ ಮೀಲ್ಸ್” ಚಿತ್ರದ ಚಿತ್ರೀಕರಣ ಮುಕ್ತಾಯ .

Kannada Beatz

Leave a Comment

Share via
Copy link
Powered by Social Snap