ತಮ್ಮ ಅಮೋಘ ಗಾಯನದಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ “ರಾಜು ದಿ ಲೆಜೆಂಡ್” ಎಂಬ ಹೆಸರಿನಲ್ಲಿ ಏಪ್ರಿಲ್ 19 ರಂದು ಕೋಣನ ಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ ರಾವ್, ಪ್ರವೀಣ್ & ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
![](https://kannadabeatz.com/wp-content/uploads/2024/04/img-20240416-wa00677729334100590658966-1024x683.webp)
ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ಈ ಕುರಿತು ಸ್ನೇಹಿತರಾದ ಖ್ಯಾತ ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಅವರ ಬಳಿ ಹೇಳಿದೆ. ಅವರ ಯೋಚನೆ ಕೂಡ ಇದೇ ಆಗಿತ್ತು. ನಾವಿಬ್ಬರು ಈ ಸಮಾರಂಭವನ್ನು ಆಯೋಜಿಸಲು ಮುಂದಾದೆವು. ಈ ಕುರಿತು ಎಲ್ಲರೊಡನೆ ಚರ್ಚಿಸಿದಾಗ ರಾಜು ಅನಂತಸ್ವಾಮಿ ಅವರ ಹತ್ತಿರದ ಒಡನಾಡಿಗಳು ಹಾಗೂ ಅವರ ಶಿಷ್ಯರು ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ಶ್ರೀನಿವಾಸ ಜಿ ಕಪ್ಪಣ್ಣ ಹಾಗೂ ಪ್ರವೀಣ್ ಡಿ ರಾವ್ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆಯಲಿದೆ. ಏಪ್ರಿಲ್ 19 ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ “ರಾಜು ದಿ ಲೆಜೆಂಡ್” ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ನಡೆಯಲಿದೆ. ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನ ಸುಪ್ರಸಿದ್ದ ಗಾಯಕ, ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಷುಯಲ್ಸ್ ಪ್ರದರ್ಶನವಾಗುತ್ತದೆ. ಮೊದಲು ಈ ಸಮಾರಂಭವನ್ನು ಸಣ್ಣ ಮಟ್ಟದಲ್ಲಿ ಮಾಡಬೇಕೆಂದುಕೊಂಡೆವು. ಈಗ ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ದೊಡ್ಡ ಆಡಿಟೋರಿಯಂನಲ್ಲಿ ಈ ಸಮಾರಂಭ ನಡೆಯಲಿದೆ. ಈ ಸಂಗೀತ ಸಂಜೆ ಯಶಸ್ವಿಯಾಗಲು ಜನರ ಸಹಕಾರ ಅಗತ್ಯ. ರಾಜು ಅನಂತಸ್ವಾಮಿ ಅವರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಈ ಮೂಲಕ ವಿನಂತಿ ಮಾಡುತ್ತೇವೆ. ಟಿಕೇಟ್ ಬೆಲೆ ಕೇವಲ 299 ರೂಪಾಯಿಗೆ ನಿಗದಿ ಮಾಡಲಾಗಿದ್ದು, ಬುಕ್ ಮೈ ಶೋನಲ್ಲಿ ಟಿಕೇಟ್ ಗಳು ದೊರೆಯಲಿದೆ ಎಂದು ಗಾಯಕಿ ಅನನ್ಯ ಭಟ್ ತಿಳಿಸಿದರು.
ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ಅವರ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಏಪ್ರಿಲ್ 19, ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಅದೇ ದಿನ “ರಾಜು ದಿ ಲೆಜೆಂಡ್” ಎಂಬ ಕಾರ್ಯಕ್ರಮ ಮಾಡಲು ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದ್ದೆವು. ನಂತರ ನಮ್ಮೊಂದಿಗೆ ರಾಜು ಅನಂತಸ್ವಾಮಿ ಅವರ ಒಡನಾಡಿಗಳು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಜೊತೆಯಾದರು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ “ರಾಜು ದಿ ಲೆಜೆಂಡ್” ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು(ಕೋರಸ್) ಹಾಗೂ ವಾದ್ಯಗಾರರು ಉಪಸ್ಥಿತರಿರುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ ಎಂದು ಕಾರ್ಯಕ್ರಮದ ಬಗ್ಗೆ ಮಂಜುನಾಥ್ ಸತ್ಯಶೀಲ್ (ಡ್ರಮ್ಮರ್) ಮಾಹಿತಿ ನೀಡಿದರು.
ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, “ರಾಜು ದಿ ಲೆಜೆಂಡ್” ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಸಹ ಸಮಾರಂಭದ ಕುರಿತು ಮಾತನಾಡಿದರು.
![](https://kannadabeatz.com/wp-content/uploads/2024/04/IMG-20240416-WA0068-jpg.webp)