ಈಗ ಟೀಸರ್ ಬಂದಿದೆ. ಮಾಸಾಂತ್ಯಕ್ಕೆ ಸಿನಿಮಾ ಬರಲಿದೆ
ಹೊಸ ಯುವ ಉತ್ಸಾಹಿ ತಂಡದ ಸಮಾಗಮದಲ್ಲಿ “ಹುಲಿಭೇಟೆ ಚಿತ್ರ ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ,
ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಎಂ.ವೀರೇಶ್ ಮುಂತಾದ ಗಣ್ಯರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
![](https://kannadabeatz.com/wp-content/uploads/2022/05/IMG-20220505-WA0014-1024x683.jpg)
ನಾನು ಚಿತ್ರ ಆರಂಭಿಸಿದಾಗ ಕೆಲವು ಅಡೆತಡೆಗಳು ಎದುರಾದವು. ಮಕ್ಕಳಿಗೆ ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ. ನನಗೆ ತಾಯಿಯ ತರಹ ವಾಣಿಜ್ಯ ಮಂಡಳಿ ಹಾಗೂ ತಂದೆಯ ಸ್ಥಾನದಲ್ಲಿ ನಿರ್ಮಾಪಕರ ಸಂಘ. ಈ ಎರಡು ಸಂಸ್ಥೆಗಳ ಸಹಕಾರದಿಂದ ನನಗೆ ಎದುರಾದ ಕಷ್ಟ ದೂರವಾಗಿದೆ. ಆ ಎರಡೂ ಸಂಸ್ಥೆಗಳಿಗೆ ಧನ್ಯವಾದ. ಚಿತ್ರದ ಬಗ್ಗೆ ಹೇಳುವುದಾದರೆ ಭೂಗತಲೋಕದ ಒಂದಿಷ್ಟು ಕಥೆ ಜೊತೆಗೆ ನವೀರಾದ ಪ್ರೇಮಕಾವ್ಯ ಸಹ ಇದರಲ್ಲಿದೆ.ಕಲ್ಯಾಣ ಕರ್ನಾಟಕದ ಭಾಗದಲ್ಲೇ ಚಿತ್ರೀಕರಣ ನಡೆದಿದೆ . ಮೇ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿರುವ ಸಮಸ್ತರಿಗೂ ವಂದನೆ ತಿಳಿಸಿದರು ನಿರ್ದೇಶಕ ರಾಜ್ ಬಹದ್ದೂರ್ .
![](https://kannadabeatz.com/wp-content/uploads/2022/05/IMG-20220505-WA0015-683x1024.jpg)
ಕೇವಲ ಒಂದುವರೆ ಸಾವಿರ ರೂಪಾಯಿಯಿಂದ ಆರಂಭವಾದ ಸಿನಿಮಾವಿದು. ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಇನ್ನಿತರ ಕೆಲಸ ಮಾಡಿರುವ ನನಗೆ ನಟನೆಯಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ತಂದೆ-ತಾಯಿಯ ಬೆಂಬಲ ದೊರಕಿತು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆ ನನ್ನಿಂದ ದೂರಾದರು. ಆದರೂ ಧೃತಿಗೆಡದೆ ನನ್ನ ತಾಯಿ, ನೀನು ಈ ಸಿನಿಮಾ ಪೂರ್ಣಮಾಡು ಎಂದು ನನ್ನ ಜೊತೆಗೆ ನಿಂತರು ಎಂದು ಹೇಳುತ್ತಾ ನಾಯಕ ವಿಶ್ವ ಭಾವುಕರಾದರು.
ನಾಯಕಿ ರೋಹಿಣಿ ಹಾಗೂ ಛಾಯಾಗ್ರಾಹಕ ಧನಪಾಲ್ “ಹುಲಿಭೇಟೆ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಧಾನುಬಾಯಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಅರವಿಂದ ರಾಜ್ ಸಂಕಲನ ಹಾಗೂ ಮಂಜು ನಾಗಪ್ಪ ಅವರ ಸಾಹಸ ನಿರ್ದೇಶನವಿದೆ.
![](https://kannadabeatz.com/wp-content/uploads/2022/05/IMG-20220504-WA0097.jpg)