ಚಿತ್ರ ಬಿಡುಗಡೆಗೂ ಮುನ್ನ ಹಿರಿಯ ಕಲಾವಿದರನ್ನು ಸನ್ಮಾನಿಸಿದ ನಿರ್ಮಾಪಕರು .
Triple A ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ” ಬೆಂಗಳೂರು 69″ ಚಿತ್ರ ಇದೇ ಫೆಬ್ರವರಿ 10 ರಂದು ತೆರೆಗೆ ಬರುತ್ತಿದೆ.
ಚಿತ್ರ ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯನಟರಾದ ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಶೈಲಶ್ರೀ ಹಾಗೂ ಜಯಲಕ್ಷ್ಮಿ ಪಾಟೀಲ್ ಅವರನ್ನು ನಿರ್ಮಾಪಕ ಗುಲ್ಜರ್ ಜಾಕೀರ್ ಸನ್ಮಾನ ಮಾಡಿದರು.
![](https://kannadabeatz.com/wp-content/uploads/2023/02/IMG-20230205-WA0038-682x1024.jpg)
ಸನ್ಮಾನಿತರ ಪರವಾಗಿ ಮಾತನಾಡಿದ ಹಿರಿಯ ನಟ ಉಮೇಶ್, ಚಿತ್ರ ಬಿಡುಗಡೆ ಮಾಡುತ್ತಿರುವ ಈ ಸಂದರ್ಭದಲ್ಲಿ ನಮ್ನನ್ನು ನೆನಪಿಸಿಕೊಂಡು ಸನ್ಮಾನಿಸಿದ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ನಾನು ತಂದೆ-ತಾಯಿಯಷ್ಟೇ ಗೌರವಿಸುವುದು ಕನ್ನಡ ಭಾಷೆಯನ್ನು. ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಕಳೆದವರ್ಷ ತೆರೆಕಂಡ ಕೆಲವು ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಮ್ಮ ಚಿತ್ರ ಸಹ ಅದೇ ರೀತಿ ಯಶಸ್ವಿಯಾಗಲಿ ಎಂದು ನೀವು ಹಾರೈಸಿ. ಇದೇ ಹತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ನನಗೆ ಈ ಹಿರಿಯ ಕಲಾವಿದರನ್ನು ಗೌರವಿಸಬೇಕೆಂಬ ಆಸೆಯಿತ್ತು. ಇಂದು ಈಡೇರಿದೆ. ಅವರ ಆಶೀರ್ವಾದ ನಮಗೆ ಸದಾ ಇರಲಿ. ನನಗೆ ಸಾಕಷ್ಟು ಸಲಹೆ ನೀಡಿದ್ದ ಉಮೇಶ್ ಬಣಕಾರ್ ಅವರಿಗೂ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ಮಾಪಕ ಗುಲ್ಜರ್ ಜಾಕೀರ್.
![](https://kannadabeatz.com/wp-content/uploads/2023/02/IMG-20230205-WA0040-1024x682.jpg)
ಇದೊಂದು ಇಂಟರ್ ನ್ಯಾಷನಲ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಅದರ ಜೊತೆಗೆ ಲವ್ , ಸೆಂಟಿಮೆಂಟ್ ಎಲ್ಲವೂ ಇದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಕ್ರಾಂತಿ ಚೈತನ್ಯ.
ನಮ್ಮ ಚಿತ್ರ ಫೆಬ್ರವರಿ 10 ರಂದು ತರೆಗೆ ಬರುತ್ತಿದೆ. ಈಗಾಗಲೇ ಚಿತ್ರ ನೋಡಿರುವವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ನಟಿ ಅನಿತಾ ಭಟ್ ತಿಳಿಸಿದರು.
ನಟ ಪವನ್ ಶೆಟ್ಟಿ, ಸಂಗೀತ ನೀಡಿರುವ ವಿಕ್ರಮ್ – ಚಂದನ, ಛಾಯಾಗ್ರಾಹಕ ಪರಮೇಶ್, ಸಂಕಲಕಾರ ಅಕ್ಷಯ್ ಪಿ ರಾವ್ ಚಿತ್ರದ ಕುರಿತು ಮಾಹಿತಿ ನೀಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಚಿತ್ರತಂಡಕ್ಕೆ ಶುಭ ಕೋರಿದರು.
ಶಫಿ, ಅನಿತಾ ಭಟ್, ಪವನ್ ಶೆಟ್ಟಿ, ಜೈದೇವ್ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
![](https://kannadabeatz.com/wp-content/uploads/2023/02/IMG-20230205-WA0035.jpg)