ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
![](https://kannadabeatz.com/wp-content/uploads/2022/02/FB_IMG_1644236227478-1024x683.jpg)
ಮುಂಬೈ ಮೂಲದ ಆನಂದ್ ಪ್ರಕಾಶ್ ಮಿಶ್ರ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಥ್ರಿಲ್ಲರ್ ಸಿನಿಮಾಗಿರುವುದರಿಂದ ಕಥೆ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ.
ಬಹಳ ದಿನಗಳ ನಂತರ ನಾನು ಈ ಚಿತ್ರದ ಮೂಲಕ ನಟನೆಗೆ ಮರಳಿ ಬಂದಿದ್ದೀನಿ. ದಿಗಂತ್ , ಕಮರ್ ಅವರ ಜೊತಗೆ ಕ್ರಿಕೇಟ್ ಆಡಿದ್ದೀನಿ. ಆದರೆ ಸಿನಿಮಾ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಬೆಂಬಲವಿರಲಿ ಎಂದರು ತರುಣ್ ಚಂದ್ರ.
ನನ್ನದು ಈ ಚಿತ್ರದಲ್ಲಿ ಬರಹಗಾರನ ಪಾತ್ರ. ಕಮರ್ ಹಾಗೂ ತರುಣ್ ನನ್ನ ಬಹಳ ದಿನಗಳ ಸ್ನೇಹಿತರು. ಕಮರ್ ಯಾವಾಗಲೂ ಒಂದು ಸಿನಿಮಾ ಮಾಡೋಣ ಎನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ ಎಂದರು ದಿಗಂತ್.
ನನಗೆ ಇವರೆಲ್ಲರೂ ಮೊದಲಿಂದಲೂ ಪರಿಚಯ. ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕರು ಕಥೆ ಬಗ್ಗೆ ಹೆಚ್ಚು ಹೇಳಿಲ್ಲ ಎನ್ನುತ್ತಾರೆ ಕಾವ್ಯ ಶೆಟ್ಟಿ.
ಮತ್ತೊಬ್ಬ ನಾಯಕಿ ಕೊಮಿಕ ಆಂಚಲ್ ಸಹ ಸಿನಿಮಾ ಕುರಿತು ಮಾತನಾಡಿದರು.
ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ ಅವರನ್ನು ಮುಂಬೈನಲ್ಲಿ ಭೇಟಿ ಯಾದಾಗ ಈ ಕಥೆ ಹೇಳಿದರು. ಇಷ್ಟವಾಯಿತು. ನಾಲ್ಕು ಹಾಡುಗಳಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೇ ಏಳರಿಂದ ಬೆಂಗಳೂರು, ಕೊಡಗು ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಕಮರ್ ತಿಳಿಸಿದರು. ಮತ್ತೊಬ್ಬ ನಿರ್ಮಾಪಕ ಕಿರಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
![](https://kannadabeatz.com/wp-content/uploads/2022/02/FB_IMG_1644236231074.jpg)